ಎಐ ಕೌಶಲ ಕುರಿತು ರಾಜ್ಯ ಸರ್ಕಾರದ ಜೊತೆ ಒಡಂಬಡಿಕೆಗೆ ಮೈಕ್ರೋಸಾಪ್ಟ್ ಒಲವು: ಎಂಬಿ ಪಾಟೀಲ ಮೈಕ್ರೋಸಾಫ್ಟ್ ಕಂಪನಿಯ ಭಾರತ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಪುನೀತ್ ಚಾಂದೋಕ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜೊತೆಗೆ ವಿಚಾರ ವಿನಿಮಯ ನಡೆಸಿದ ಎಂಬಿ ಪಾಟೀಲ್. ಬೆಂಗಳೂರು: ಜನರೇಟೀವ್ ಎಐ ಮತ್ತು ಮುಂಚೂಣಿಗೆ ಬರುತ್ತಿರುವ ಆಧುನಿಕ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಕೌಶಲಗಳನ್ನು ಕಲಿಸಲು ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಮೈಕ್ರೋಸಾಫ್ಟ್ ಕಂಪನಿಯು ಉತ್ಸುಕವಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.ತಮ್ಮನ್ನು ಭೇಟಿಯಾದ ಮೈಕ್ರೋಸಾಫ್ಟ್ ಕಂಪನಿಯ ಭಾರತ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಪುನೀತ್ ಚಾಂದೋಕ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜೊತೆಗೆ ವಿಚಾರ ವಿನಿಮಯ ನಡೆಸಿದ ಎಂಬಿ ಪಾಟೀಲ್, ಕರ್ನಾಟಕವನ್ನು ಭಾರತದ ಎಐ ತಂತ್ರಜ್ಞಾನದ ಪ್ರಮುಖ ತಾಣವನ್ನಾಗಿ ಮಾಡಲು ಮೈಕ್ರೋಸಾಫ್ಟ್ ಬಯಸಿದೆ ಎಂದರು.ಹೂಡಿಕೆದಾರರಿಗೆ ನೆರವು ನೀಡುವಂತಹ ಪ್ರಕ್ರಿಯೆಗಳಿಗೆ ಎಐ ತಂತ್ರಜ್ಞಾನವನ್ನು ಹೇಗೆ ಅನ್ವಯಿಸಬಹುದು ಮತ್ತು ಇದಕ್ಕೆ ಪರಿಣತರನ್ನು ಹೇಗೆ ತೊಡಗಿಸಬಹುದು ಎಂದು ಕಂಪನಿಯು ಚಿಂತಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ರಾಜ್ಯ ಸರಕಾರವು ತಂತ್ರಜ್ಞಾನದ ಬಳಕೆಯ ಪರವಾಗಿದ್ದು, ಮೈಕ್ರೋಸಾಫ್ಟ್ ತರಹದ ದೈತ್ಯ ಕಂಪನಿಗಳು ಇದಕ್ಕೆ ಮುಂದಡಿ ಇಡಬೇಕು. ಮೊದಲಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಡಳಿತದಲ್ಲಿ ಎಐ ತಂತ್ರಜ್ಞಾನ ಅಳವಡಿಕೆ ಬಗ್ಗೆ ನೆರವಾಗಬಹುದು ಎಂದರು.ಫೆಬ್ರುವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮೈಕ್ರೋಸಾಫ್ಟ್ ಕಂಪನಿಯು ಸಕ್ರಿಯ ಪಾಲ್ಗೊಳ್ಳುವಿಕೆ ಬಗ್ಗೆ‌ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.ಮೈಕ್ರೋಸಾಫ್ಟ್ ಇಂಡಿಯಾದ ನಿಯೋಗದಲ್ಲಿ ಅದರ ವ್ಯವಸ್ಥಾಪಕ ನಿರ್ದೇಶಕಿ ಇರಿನಾ ಘೋಷ್, ಸ್ಟ್ರಾಟೆಜಿ ಹೆಡ್ ಶೀನು ಶೇಖರಿ, ಹಿರಿಯ ನಿರ್ದೇಶಕ ಅನೀಶ್ ಚಾಂಡಿ, ನಿರ್ದೇಶಕ ಸಂದೀಪ್ ಮಹಾಪಾತ್ರ ಮುಂತಾದವರು ಇದ್ದರು. ಸರಕಾರದ ಪ್ರತಿನಿಧಿಗಳಾಗಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.